ಪುತ್ತೂರು: ಪುತ್ತೂರು ತಾಲೂಕಿನ ಸಾರ್ವಜನಿಕರು ಎದುರಿಸುತ್ತಿರುವ ಅಕ್ರಮ–ಸಕ್ರಮ ಹಾಗೂ 94C ಅರ್ಜಿಗಳ ವಿಲೇವಾರಿ ವಿಳಂಬ, ಜೊತೆಗೆ ಪೌತಿ ಖಾತೆ ಬದಲಾವಣೆಯಲ್ಲಿನ ಸಮಸ್ಯೆಗಳ ಕುರಿತು ಪುತ್ತೂರು ತಾಲೂಕಿನ ತಹಶೀಲ್ದಾರ್ರನ್ನು ಭೇಟಿ ಮಾಡಿ ಪುತ್ತಿಲ ಪರಿವಾರ ನಿಯೋಗ ಚರ್ಚಿಸಿತು.
ಅಕ್ರಮ -ಸಕ್ರಮ ಸಮಿತಿ ಯಲ್ಲಿ ಮಂಜೂರಾದ ಕಡತಗಳಿಗೆ 3ವರ್ಷದಲ್ಲಿ ಈವರೆಗೂ ಅಂದಾಜು 25ಕಡತ ಗಳಿಗೆ ಹಕ್ಕುಪತ್ರ ಮತ್ತು ಪಹಣಿ ನೀಡಿರುತ್ತಿರಿ. ಉಳಿದ ಕಡತಗಳಿಗೆ 3ವರ್ಷದಲ್ಲಿ ಹಕ್ಕು ಪತ್ರ ಹಾಗೂ ಪಹಣಿ ನೀಡದೆ ಇರುವುದರಿಂದ ಕೃಷಿಕರಿಗೆ ಬೆಳೆ ವಿಮೆ, ಕೃಷಿ ಸಾಲ ಪಡೆಯಲು ಅನಾನುಕೂಲವಾಗಿದ್ದು ಈ ಸಮಸ್ಸೆ ಯನ್ನು ಈ ಕೂಡಲೇ ಬಗೆಹರಿಸದಿದ್ದಲ್ಲಿ ಕೃಷಿಕರನ್ನು ಮತ್ತು ಫಲಾನುಭವಿಗಳನ್ನು ಸೇರಿಸಿಕೊಂಡು ಪುತ್ತಿಲ ಪರಿವಾರದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಮತ್ತು ಕೆಲವು ಗ್ರಾಮಗಳಲ್ಲಿ ಇರುವ ದೊಡ್ಡ್ ಸರ್ವೇ ನಂಬರ್ ನ ಪೋಡಿ ಸಮಸ್ಸೆಯನ್ನು ಬಗೆಹರಿಸಲು ಸೂಚಿಸಲಾಯಿತು.
ಅಕ್ರಮ–ಸಕ್ರಮ ಯೋಜನೆಯಡಿ ಹಲವು ವರ್ಷಗಳಿಂದ ಅರ್ಜಿ ಸಲ್ಲಿಸಿರುವ ಅರ್ಜಿದಾರರು ತಮ್ಮ ಅರ್ಜಿಗಳ ವಿಲೇವಾರಿಗಾಗಿ ಕಾಯುತ್ತಿರುವ ಪರಿಸ್ಥಿತಿ ಇದೆ. ಅದೇ ರೀತಿ, ಕರ್ನಾಟಕ ಭೂ ಕಂದಾಯ ಕಾಯ್ದೆಯ 94C ಅಡಿಯಲ್ಲಿ ಸಲ್ಲಿಸಿರುವ ಅರ್ಜಿಗಳೂ ಹಲವು ಕಡೆಗಳಲ್ಲಿ ಬಾಕಿ ಉಳಿದಿದ್ದು, ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಅಗತ್ಯ ದಾಖಲೆಗಳ ಪ್ರಕ್ರಿಯೆ ವಿಳಂಬವಾಗುತ್ತಿದೆ. ಆದ್ದರಿಂದ ಅಕ್ರಮ–ಸಕ್ರಮ ಮತ್ತು 94C ಅಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸಿ, ಅರ್ಹ ಅರ್ಜಿದಾರರ ಅರ್ಜಿಗಳನ್ನು ನಿಯಮಾನುಸಾರ ಆದ್ಯತೆಯ ಮೇರೆಗೆ ವಿಲೇವಾರಿ ಮಾಡುವಂತೆ ತಹಶೀಲ್ದಾರ್ರಿಗೆ ಮನವಿ ಮಾಡಲಾಯಿತು.
ಇದರೊಂದಿಗೆ, ಕುಟುಂಬದ ಸದಸ್ಯರ ನಿಧನದ ನಂತರ ಜಮೀನು ಹಾಗೂ ಆಸ್ತಿಗಳ ಪೌತಿ ಖಾತೆ ಮಾಡಿಸಿಕೊಳ್ಳಲು ಸಾರ್ವಜನಿಕರು ಎದುರಿಸುತ್ತಿರುವ ವಿಳಂಬ ಮತ್ತು ಕಚೇರಿ ಮಟ್ಟದ ಸಮಸ್ಯೆಗಳ ಬಗ್ಗೆಯೂ ಗಮನ ಸೆಳೆಯಲಾಯಿತು. ಅರ್ಹ ಪ್ರಕರಣಗಳಲ್ಲಿ ಪೌತಿ ಖಾತೆ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಲಾಯಿತು.

