ಮೈಸೂರು ದಸರಾ (Mysuru Dasara) ಅಂಗವಾಗಿ ಎರಡು ದಿನಗಳ ಕಾಲ ಕಂಬಳ (Kambala) ಪ್ರದರ್ಶನ ಆಯೋಜಿಸಲು ವಿರೋಧದ ಮಧ್ಯೆಯೂ ಹಠ ಬಿದ್ದು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೈಸೂರಿನ ಹೊರವಲಯದ ಸಾತಗಳ್ಳಿ ಬಳಿ ಇರುವ 20 ಎಕರೆ ವಿಸ್ತೀರ್ಣದ ಜಾಗದಲ್ಲಿ ಕಂಬಳಕ್ಕಾಗಿ ಭರದಿಂದ ಸಿದ್ಧತೆಗಳು ಆರಂಭವಾಗಿವೆ. ಕಂಬಳ ನಡೆಯುವ ಪ್ರದೇಶವು ಸದ್ಯ ದಟ್ಟವಾದ ಹಸಿರಿನಿಂದ ಕೂಡಿದೆ. ಈ ಭಾಗದಲ್ಲಿ ವಿವಿಧ ಜಾತಿಯ 150ಕ್ಕೂ ಅಧಿಕ ಬೃಹತ್ ಗಾತ್ರದ ಮರಗಳಿದ್ದು, ಇಡೀ ಪ್ರದೇಶವನ್ನು ಆವರಿಸಿಕೊಂಡಿವೆ. ಆದರೆ ಕಂಬಳದ ಕರೆಯನ್ನು ನಿರ್ಮಿಸುವ ಸಲುವಾಗಿ ಈ ಎಲ್ಲಾ ಮರಗಳನ್ನು ಕಡಿಯಲು ಸಿದ್ಧತೆಗಳು ನಡೆದಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬೃಹತ್ ಕೆರೆಗೆ ಬೀಳಲಿದೆ ಮಣ್ಣು
ಇಲ್ಲಿ ಸುಮಾರು 6 ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ಬೃಹತ್ ಕೆರೆಯೊಂದಿದೆ. ಮಳೆಯಾದಾಗಲೆಲ್ಲಾ ಸಮೃದ್ಧವಾಗಿ ನೀರು ತುಂಬಿಕೊಳ್ಳುತ್ತಿದ್ದ ಈ ಕೆರೆಯು ಹಲವಾರು ಅಪರೂಪದ ಪಕ್ಷಿ ಪ್ರಬೇಧಗಳ ವಾಸ ಸ್ಥಾನವಾಗಿತ್ತು. ಆದರೆ ಈಗ ಈ ಕೆರೆಯನ್ನು ಮಣ್ಣು ಹಾಕಿ ಸಂಪೂರ್ಣವಾಗಿ ಮುಚ್ಚಲಾಗುತ್ತಿದೆ. ಸರ್ಕಾರದ ಈ ನಡೆಗೆ ಸ್ಥಳೀಯರಿಂದ ಎಷ್ಟೇ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದರೂ ಸರ್ಕಾರ ವಿರೋಧಕ್ಕೆ ಮಣಿಯದೇ 10ಕ್ಕೂ ಹೆಚ್ಚು ಜೆಸಿಬಿ (JCB) ಯಂತ್ರಗಳನ್ನು ಬಳಸಿ ಇಡೀ ಜಾಗವನ್ನು ಸಮತಟ್ಟುಗೊಳಿಸುತ್ತಿದೆ.
ಸುರುಕು ತುಲು ಭಾಸೆಗ್ ಮಾನಾದಿಗೆ ಕೊರ್ಪಾಲೆ, ಅವ್ ಬುಡ್ದು ಕಂಬುಲನ್ ಓಲೋಲು ಮನ್ಪುನ ಅರ್ಬು ದಾಯೆ ಎಂದ ನೆಟ್ಟಿಗ
ಮಾನ್ಯ ಶಾಸಕರೆಯಾಯಿನ ಅಶೋಕ್ ಕುಮಾರ್ ಅಣ್ಣಾ, ಇರೆಗ್ ಆಪುಂಡ್ಡ ಸುರುಕು ತುಲು ಭಾಸೆಗ್ ಮಾನಾದಿಗೆ ಕೊರ್ಪಾಲೆ, ಅವ್ ಬುಡ್ದು ಕಂಬುಲನ್ ಓಲೋಲು ಮನ್ಪುನ ಅರ್ಬು ದಾಯೆ ? ಕಂಬುಲಗ್ ಐನವೇ ಆಯ್ನ ಮರ್ಯಾದಿ ಉಂಡತೇ, ಓಲಾ ಮನಸ್ ಬತ್ತಿನಲ್ಪ ಕರೆ ಪಾಡೆರೆ ಆಪುಜತೇ ? ಈರ್ ತುಲುಕೊಂತೆ ಪೊರಂಬಾಟ ಮನ್ತುದ್ ತೋಜಾಯರುಂಡ ಜವನ್ಯೆರ್ ಈರ್ನೊಟ್ಟು ಉಂತೆರ್ ಬೊಕ್ಕ ಕಂಬುಲನ್ ಊರೊರ್ಮೆ ತಿರ್ಗಾದ್ ಈರೆಗ್ಲಾ ದಾಲಾ ತಿಕ್ಕಂದ್ ಪಂದ್ ಎನ್ನೊಂಜಿ ಉಂದು ಎಂದು ಸಾಮಾಜಿಕ ಜಾಲತಾಣದಲ್ಲಿ ದೀಕ್ಷಿತ್ ಶೆಟ್ಟಿಗಾರ್ ಬರೆದುಕೊಂಡಿದ್ದಾರೆ.

ಚಾಟಿ ಬಿಸಿದರೂ, ನಿರ್ಧಾರದಿಂದ ಹಿಂದೆ ಸರಿಯದ ದಪ್ಪ ಚರ್ಮದ ಸರ್ಕಾರ
ಮೂಲಸೌಕರ್ಯದ ಕೊರತೆ ಇರುವಾಗ ಕಂಬಳದ ಪ್ರದರ್ಶನಕ್ಕಾಗಿ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣ ಪೋಲು ಮಾಡಲಾಗುತ್ತಿದೆ ಎನ್ನಲಾಗಿದೆ. ಮೈಸೂರು ದಸರಾ ತನ್ನದೇ ಆದ ಶತಮಾನಗಳ ಇತಿಹಾಸ ಮತ್ತು ಧಾರ್ಮಿಕ ಪಾವಿತ್ರ್ಯತೆ ಹೊಂದಿದೆ; ಅದಕ್ಕೆ ಕರಾವಳಿಯ ಕ್ರೀಡೆಯನ್ನು ಸೇರಿಸಿ ಕೇವಲ ಒಂದು “ಮನರಂಜನೆಯ ಪ್ರದರ್ಶನ ವಸ್ತು” (Exhibit) ವನ್ನಾಗಿ ಮಾಡುವುದು ಖಂಡನೀಯ ಎಂದು ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ದಸರಾ ಉನ್ನತ ಮಟ್ಟದ ಸಭೆಯಲ್ಲಿ ಸ್ಪಷ್ಟವಾಗಿ ವಿರೋಧಿಸಿದ್ದಾರೆ.
ಕಂಬಳವು ತುಳುನಾಡಿನ ಮಣ್ಣು, ಭೌಗೋಳಿಕತೆ ಮತ್ತು ಅಲ್ಲಿನ ದೈವಾರಾಧನೆಗೆ ಒಳಪಟ್ಟಿರುವ ಕ್ರೀಡೆಯಾಗಿದೆ. ಅದನ್ನು ಕೃತಕವಾಗಿ ಮೈಸೂರಿಗೆ ತರುವುದು ಎರಡೂ ಕಡೆಯ ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಈಗಾಗಲೇ ವಾದಿಸಿದ್ದಾರೆ.
ಬರಗಾಲ ಮತ್ತು ಹಣಕಾಸಿನ ಮುಗ್ಗಟ್ಟು ಇರುವಾಗ ಕೇವಲ ಎರಡು ದಿನಗಳ ಕಂಬಳ ಪ್ರದರ್ಶನಕ್ಕಾಗಿ ಸಾರ್ವಜನಿಕರ ೮ ರಿಂದ ೧೦ ಕೋಟಿ ರೂಪಾಯಿ ಹಣವನ್ನು ಪೋಲು ಮಾಡಲಾಗುತ್ತಿದೆ ಎಂದು ರೈತ ಸಂಘಟನೆಗಳು ಆರೋಪಿಸಿವೆ.
ಕರಾವಳಿಯ ತಟಸ್ಥ ಹವಾಮಾನದಲ್ಲೇ ಬೆಳೆದಿರುವ ಕಂಬಳದ ಕೋಣಗಳನ್ನು ನೂರಾರು ಕಿಲೋಮೀಟರ್ ದೂರದ ಮೈಸೂರಿಗೆ ಲಾರಿಗಳಲ್ಲಿ ಸಾಗಿಸುವುದು ಅವುಗಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಪ್ರಾಣಿ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಪ್ರಗತಿಪರ ಚಿಂತಕರು, ಹೆರಿಟೇಜ್ ತಜ್ಞರು ಮತ್ತು ರೈತ ಸಂಘಟನೆಗಳು ಒಟ್ಟಾಗಿ ಹೋರಾಟ ಸಮಿತಿ ರಚಿಸಿಕೊಂಡಿದ್ದು, ಸರ್ಕಾರವು ಒಂದು ವಾರದೊಳಗೆ ದಸರಾ ಕಂಬಳ ಪ್ರಸ್ತಾಪವನ್ನು ಕೈಬಿಡದಿದ್ದರೆ ತೀವ್ರ ಪ್ರತಿಭಟನೆ ಹಾಗೂ ನ್ಯಾಯಾಲಯದ ಮೊರೆ ಹೋಗುವುದಾಗಿ ರಾಜ್ಯ ಸರ್ಕಾರಕ್ಕೆ ಗಡುವು ನೀಡಿವೆ.

