ಪುತ್ತೂರು ಸಮೀಪದ ಪೋಳ್ಯದಲ್ಲಿ ಕಾಲಿನ ಸ್ವಾಧೀನ ಕಳೆದುಕೊಂಡ ನಾಯಿ ಮೇಲೆ ಮನೆಯ ಯಜಮಾನ ತೋರಿದ ಮಮಕಾರ ಎಲ್ಲೆಡೆ ಸುದ್ದಿಯಾಗುತ್ತಿದೆ. ಇವರ ಮನೆಯ ‘ಚಿನ್ನು’ ಹೆಸರಿನ ನಾಯಿಯು ಮೂರು ವಾರಗಳ ಹಿಂದೆ ಕಾಣೆಯಾದಾಗ ಮನೆಯ ಯಜಮಾನ ಗಣೇಶ್ ಕೇರ ಅವರು ಕಂಗಾಲಾಗಿದ್ದರು. ತಕ್ಷಣವೇ ಸಾಮಾಜಿಕ ಜಾಲತಾಣಗಳು ಮತ್ತು ಪತ್ರಿಕೆಗಳಲ್ಲಿ ಜಾಹೀರಾತು ನೀಡಿ, ನಾಯಿಯ ಸುಳಿವು ನೀಡಿದವರಿಗೆ ಅಥವಾ ಹುಡುಕಿಕೊಟ್ಟವರಿಗೆ 50,000 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಫಿಟ್ಸ್ ಸಮಸ್ಯೆಯಿಂದಾಗಿ ಈ ನಾಯಿಯು ಕಾಲಿನ ಸ್ವಾಧೀನವು ಕಳೆದುಕೊಂಡಿತ್ತು.

ಸ್ಥಳೀಯ ನಿವಾಸಿ ಪುರಂದರ ಎಂಬವರು ನಾಪತ್ತೆಯಾಗಿದ್ದ ಚಿನ್ನು ನಾಯಿಯನ್ನು ಹುಡುಕಿಕೊಟ್ಟಿದ್ದಾರೆ. ಇದೀಗ ಕೊಟ್ಟ ಮಾತಿನಂತೆ ಗಣೇಶ್ ಕೇರ ಅವರು ಪುರಂದರ ಅವರನ್ನು ಮನೆಗೆ ಕರೆಸಿ, 50,000 ರೂಪಾಯಿಗಳ ಚೆಕ್ ಅನ್ನು ವಿತರಿಸಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಬಹುಮಾನದ ಮೊತ್ತವನ್ನು ಪಾರದರ್ಶಕವಾಗಿ ನೀಡಿ, ಕೊಟ್ಟ ಮಾತಿನಂತೆ ನಡೆದ ಶ್ವಾನ ಪ್ರಿಯ ಗಣೇಶ್ ಅವರ ನಿಜವಾದ ಪ್ರಾಣಿ ಪ್ರೀತಿಗೆಗೆ ವ್ಯಾಪಕ ಪ್ರಶಂಸೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ. ಅಂದ ಹಾಗೆ “ಚಿನ್ನು” ಅವರ ಮನೆಯ ಏಕೈಕ ನಾಯಿಯಾಗಿರಲಿಲ್ಲ, ಗಣೇಶ್ ಕೇರ ಅವರು ತಮ್ಮ ಮನೆಯಲ್ಲಿ ಸುಮಾರು 30 ನಾಯಿಗಳನ್ನು ಇದೆ ರೀತಿ ಪ್ರೀತಿಯಿಂದ ಸಾಕುತ್ತಿದ್ದಾರೆ.

