ಮಂಗಳೂರು: ಉಪ್ಪಿನಂಗಡಿಯ ಪದ್ಮುಂಜ ಸಮೀಪದ ಅಡೆಂಜ ಎಂಬಲ್ಲಿ ಖೋಟಾನೋಟು ತಯಾರಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಉಪ್ಪಿನಂಗಡಿ ಪೊಲೀಸರು ಜುಲೈ 15 ರ ತಡರಾತ್ರಿ ಮಿಂಚಿನ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಸ್ಥಳೀಯ ಮೂಲಗಳ ಪ್ರಕಾರ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಖೋಟಾನೋಟು ತಯಾರಿಸಲು ಬಾಡಿಗೆ ಕಟ್ಟಡ ಒದಗಿಸಿದ ಸ್ಥಳೀಯ ವ್ಯಕ್ತಿ ಸಿರಾಜ್ ಸಹಿತ ಏಳು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ಅತ್ಯಾಧುನಿಕ ಯಂತ್ರಗಳನ್ನು ಬಳಸಿಕೊಂಡು ನಕಲಿ ನೋಟುಗಳನ್ನು ತಯಾರಿಸುತ್ತಿದ್ದರು ಎನ್ನುವ ಅಘಾತಕಾರಿ ವರದಿ ಬಯಲಾಗಿದ್ದು, ಈ ಜಾಲದ ಬಗ್ಗೆ ಪೊಲೀಸ್ ಇಲಾಖೆಯಿಂದ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

