ಚಿಕ್ಕಬಳ್ಳಾಪುರದ ನಂದಿಬೆಟ್ಟದ ಹೋಮ್ಸ್ಟೇ ಒಂದರಲ್ಲಿ ಯುವತಿಯೋರ್ವಳ ಶವ ಪತ್ತೆಯಾಗಿದೆ. ಪ್ರೇಯಸಿ ಸುರಭಿಯನ್ನು ಕೊಲೆ ಮಾಡಿದ ಬಳಿಕ ಪ್ರಿಯಕರ ಸಂಜಿತ್ ಅಲಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದ ಸುಲ್ತಾನ ಪೇಟೆಯ ನಿವಾಸಿಯಾಗಿದ್ದ ಸುರಭಿ, ಮುದ್ದೇನಹಳ್ಳಿ ಆಸ್ಪತ್ರೆಯಲ್ಲಿ ಫಿಜಿಯೋಥೆರಪಿ ವೈದ್ಯೆಯಾಗಿದ್ದರು. ಕೆಲವು ತಿಂಗಳ ಹಿಂದೆ ಬೆಂಗಳೂರಿಗೆ ಟ್ರೇನಿಂಗ್ಗೆ ಬಂದಿದ್ದಾಗ, ಕೇರಳ ಮೂಲದ ಕ್ಯಾಬ್ ಡ್ರೈವರ್ ಸಂಜೀತ್ ಆಲಿ ಎಂಬಾತನ ಪರಿಚಯವಾಗಿತ್ತು. ಪ್ರತಿದಿನ ಪಿಕಪ್ ಮತ್ತು ಡ್ರಾಪ್ ಮಾಡುವಾಗ ಶುರುವಾದ ಸಲುಗೆ, ಕೊನೆಗೆ ಪ್ರೀತಿಗೆ ತಿರುಗಿತ್ತು. ಪ್ರೇಮದ ಅಮಲಿನಲ್ಲಿ ಇಬ್ಬರೂ ಮನೆ ಬಿಟ್ಟು ಓಡಿಹೋಗಿದ್ದರು. ಈ ಸಂಬಂಧ ಪೋಷಕರು ಮಿಸ್ಸಿಂಗ್ ಕೇಸ್ ಕೂಡ ದಾಖಲಿಸಿದ್ದರು.
ನಂತರದ ದಿನಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಶುರುವಾಗಿ, ಸುರಭಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಆಲಿ ವಿರುದ್ಧ ದೂರು ನೀಡಿದ್ದರು. ತದನಂತರ ಕಳೆದ 6 ತಿಂಗಳಿನಿಂದ ಇಬ್ಬರೂ ದೂರವಾಗಿದ್ದರು. ಆದರೆ, ಇತ್ತೀಚೆಗೆ ಆಲಿ ಮತ್ತೆ ಸುರಭಿಯನ್ನು ಪುಸಲಾಯಿಸಿ ಮಾತನಾಡಿಸಲು ಶುರು ಮಾಡಿದ್ದ ಎನ್ನಲಾಗಿದೆ.
ನಂದಿ ಬೆಟ್ಟದ ಹೋಂ ಸ್ಟೇನಲ್ಲಿ ನಡೆದಿದ್ದೇನು?
ಎರಡು ದಿನಗಳ ಹಿಂದೆ ಮುದ್ದೇನಹಳ್ಳಿ ಬಳಿಯ ಹೋಂಸ್ಟೇನಲ್ಲಿ ಆಲಿ ರೂಮ್ ಬುಕ್ ಮಾಡಿದ್ದ. ಆತನ ಮಾತು ನಂಬಿ ಅಲ್ಲಿಗೆ ಹೋದ ಸುರಭಿ, ಮರಳಿ ಬರಲೇ ಇಲ್ಲ. ಮೂಲಗಳ ಪ್ರಕಾರ, ಅಲ್ಲಿ ಇಬ್ಬರೂ ಡ್ರಗ್ಸ್ ಸೇವನೆ ಮಾಡಿದ್ದರು ಎನ್ನಲಾಗಿದ್ದು, ತದನಂತರ ನಡೆದ ಗಲಾಟೆಯಲ್ಲಿ ಸುರಭಿ ಉಟ್ಟ ಸೀರೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಚೆಕ್-ಔಟ್ ಸಮಯ ಮುಗಿದರೂ ರೂಮ್ ಬಾಗಿಲು ತೆರೆಯದಿದ್ದಾಗ ಸಿಬ್ಬಂದಿ ಬಂದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇತ್ತ ಪ್ರಿಯಕರ ಸಂಜೀತ್ ಆಲಿ ಕೂಡ ಅಸ್ವಸ್ಥನಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ
‘ಲವ್ ಜಿಹಾದ್’ ಆರೋಪ ಮಾಡಿದ ಹೆತ್ತವರು
ಮಗಳ ನಿಗೂಢ ಸಾವಿನ ಬೆನ್ನಲ್ಲೇ ಸುರಭಿ ಪೋಷಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ಇದು ಲವ್ ಜಿಹಾದ್, ಪ್ಲ್ಯಾನ್ ಮಾಡಿ ನಮ್ಮ ಮಗಳನ್ನು ಬಲಿ ಪಡೆದಿದ್ದಾರೆ” ಎಂದು ತಾಯಿ ಗೀತಾ ಆರೋಪಿಸಿದ್ದಾರೆ. ಘಟನಾ ಸ್ಥಳದಲ್ಲಿ ಸುರಭಿ ಬರೆದಿದ್ದ ಡೈರಿಯೊಂದು ಪತ್ತೆಯಾಗಿದ್ದು, ಸಾವಿನ ರಹಸ್ಯವನ್ನು ಭೇದಿಸಲು ಪೊಲೀಸರಿಗೆ ಪ್ರಮುಖ ಆಧಾರವಾಗಿದೆ.
ಸದ್ಯ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅಸಲಿ ಸತ್ಯ ಪೋಸ್ಟ್ಮಾರ್ಟಮ್ ವರದಿ ಹಾಗೂ ಆಲಿಯ ವಿಚಾರಣೆಯ ನಂತರ ಹೊರಬರಬೇಕಿದೆ.

