ಮಂಗಳೂರು, ನಗರದ ಮಂಗಳಾದೇವಿ ಸಮೀಪದಲ್ಲಿರುವ ಶ್ರೀ ರಾಮಕೃಷ್ಣ ಮಠದಲ್ಲಿ ಜೂನ್ 21, ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ರಾಮಕೃಷ್ಣ ಮಠ, ಮಂಗಳೂರು ಇಲ್ಲಿಯ ಬಾಲಕಾಶ್ರಮದ ವಾರ್ಡನ್ ಆಗಿರುವ ಸ್ವಾಮಿ ಯುಗೇಶಾನಂದಜಿ ಆಶೀರ್ವಚನದಲ್ಲಿ ಯೋಗ ವಿಜ್ಞಾನ ಎಂಬುದು ಸಾವಿರಾರು ವರ್ಷಗಳ ಹಳೆಯದು. ವೈದಿಕ ಕಾಲದಿಂದಲೂ ಭಾರತದಲ್ಲಿ ಯೋಗವನ್ನು ಪರಿಚಯಿಸಲಾಗಿದೆ. ಇದು ಹಲವಾರು ವರ್ಷಗಳಿಂದ ಭಾರತೀಯರ ಜೀವನಶೈಲಿಯ ಒಂದು ಭಾಗವಾಗಿ ಉಳಿದಿದೆ. ಯೋಗವು ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಯ ಒಂದು ಪ್ರಮುಖ ಭಾಗವಾಗಿದೆ. ಇದರಲ್ಲಿ ಮಾನವೀಯತೆ ಮತ್ತು ಆಧ್ಯಾತ್ಮಿಕ ಉನ್ನತಿಯ ಭೌತಿಕ ಅಂಶಗಳ ಗುಣಲಕ್ಷಣಗಳಿವೆ. ಪತಂಜಲಿ ಋಷಿಯವರು ತಮ್ಮ ಯೋಗ ಶಾಸ್ತ್ರದಲ್ಲಿ ಅಷ್ಟಾಂಗ ಯೋಗದ (ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣಾ ಧ್ಯಾನ ಮತ್ತು ಸಮಾಧಿ) ತಿಳಿಸಿರುತ್ತಾರೆ. ಇಲ್ಲಿ ಯೋಗದ ಪ್ರಥಮ ಮೆಟ್ಟಿಲು, ದ್ವಿತೀಯ ಮೆಟ್ಟಿಲುಗಳಾದ ಯಮ, ನಿಯಮದ ಬಗ್ಗೆ ಅರಿತು. ತಿಳಿದು ವ್ಯಕ್ತಿ ತನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಆಸನ ಕಲಿಯಲು ಸುಲಭವಾಗುತ್ತದೆ. ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಇದು ಮನಸ್ಸು ಮತ್ತು ದೇಹದ ಏಕತೆಯನ್ನು ಸಾರುತ್ತದೆ ಎಂದು ತಿಳಿಸಿದರು.
ದೇಲಂಪಾಡಿ ಯೋಗ ಪ್ರತಿಷ್ಠಾನದ ಯೋಗ ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ಶಿಬಿರಾರ್ಥಿಗಳಿಗೆ ಯೋಗ ಪರಿಚಯ ಯೋಗದ ಮಹತ್ವ ಮತ್ತು ಪ್ರಯೋಜನಗಳನ್ನು ತಿಳಿಸಿದರು. ಶ್ರೀ ದೇಲಂಪಾಡಿ ಶಿಷ್ಯರಾದ ಸುಶೀಲಾ ಕುಮಾರಿ ವಿ. ಸುಮಾ, ಕಾರ್ತಿಕ್, ಭಾರತಿ, ದೇವಿಪ್ರದ, ಶ್ರೀಲಕ್ಷ್ಮೀ ಕುಮಾರ್, ಹಾಗೂ ಚಂದ್ರಹಾಸ ಬಾಳ ಇವರು ಸಹಕರಿಸಿದರು. ಈ ಸಂದರ್ಭದಲ್ಲಿ ಯೋಗ ಗುರು ಶ್ರೀ ದೇಲಂಪಾಡಿಯವರಿಗೆ ಗುರುವಂದನೆ ಸಲ್ಲಿಸಲಾಯಿತು.

