ರಾಜಕೀಯದಲ್ಲಿ ಯಾರು ಶತ್ರುಗಳಲ್ಲ, ಯಾರು ಮಿತ್ರರಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ತಮಿಳುನಾಡು ರಾಜಕೀಯದಲ್ಲಿ ಕಾಂಗ್ರೆಸ್ ನೇತೃತ್ವದ ‘ಇಂಡಿ’ ಒಕ್ಕೂಟದಿಂದ ಡಿಎಂಕೆ ಹೊರಬಂದ ಬೆನ್ನಲ್ಲೇ, ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟದೊಂದಿಗೆ ಡಿಎಂಕೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಗಳ ಕುರಿತಾದ ಚರ್ಚೆಗಳು ನಡೆಯುತ್ತಿವೆ. ಟಿವಿಕೆ ಪಕ್ಷ ಬಹುಮತಕ್ಕೆ ಸಮೀಪ ಬರುತ್ತಿದ್ದಂತೆ ಬಣ ಬದಲಾಯಿಸಿದ ಕಾಂಗ್ರೆಸ್ ಪಕ್ಷ ಹಲವು ದಶಕಗಳ ಜೊತೆಗಿದ್ದ ಡಿಎಂಕೆ ಸಖ್ಯ ಬಿಟ್ಟು ಜೋಸೆಫ್ ವಿಜಯ್ ಸರ್ಕಾರದ ಜೊತೆ ಕೈ ಜೋಡಿಸಿತ್ತು. ಬಳಿಕ ಇಂಡಿ ಒಕ್ಕೂಟದ ಮೈತ್ರಿ ಮುರಿದುಕೊಂಡ ಡಿಎಂಕೆ, ಇದೀಗ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದತ್ತ ಡಿಎಂಕೆ ಹೆಜ್ಜೆ ಇಡುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ದೂರವಾದ ಡಿಎಂಕೆ ಮಿತ್ರರು; ಮುಸ್ಲಿಂ ಲೀಗ್ ಕೂಡ ಎಕ್ಸಿಟ್!
ತಮಿಳುನಾಡು ವಿಧಾನಸಭೆ ಚುನಾವಣೆಯ ನಂತರ ಡಿಎಂಕೆಯ ಮಿತ್ರಪಕ್ಷವಾದ ಕಾಂಗ್ರೆಸ್, ಸಿಪಿಐ, ವಿಸಿಕೆ ಮತ್ತು ಐಯುಎಂಎಲ್ ಸೇರಿದಂತೆ ಡಿಎಂಕೆಯ ಹಳೇ ಮಿತ್ರಪಕ್ಷಗಳೆಲ್ಲವೂ ಡಿಎಂಕೆ ಮೈತ್ರಿಕೂಟದಿಂದ ಹೊರಬಂದು ಆಡಳಿತಾರೂಢ ಟಿವಿಕೆ ಸರ್ಕಾರಕ್ಕೆ ಬೆಂಬಲ ಘೋಷಿಸಿವೆ. ಇದೀಗ ಚೆನ್ನೈನಲ್ಲಿ ನಡೆದ ತನ್ನ ಸಾಮಾನ್ಯ ಮಂಡಳಿ ಸಭೆಯಲ್ಲಿ ಮುಸ್ಲಿಂ ಲೀಗ್ DMK ಮೈತ್ರಿಕೂಟದಿಂದ ಹಿಂದೆ ಸರಿಯುವ ನಿರ್ಣಯವನ್ನು ಕೈಗೊಂಡಿದೆ ಎಂದು ಖಾಸಗಿ ಮಾಧ್ಯಮ ಸಂಸ್ಥೆಯು ವರದಿ ಮಾಡಿದೆ.
ವಾಜಪೇಯಿ ಅವಧಿಯಲ್ಲಿ ಎನ್ಡಿಎ ಜೊತೆಗಿತ್ತು ಡಿಎಂಕೆ
ಈ ಎರಡು ಪಕ್ಷಗಳು ಒಂದಾಗುತ್ತಿರುವುದು ಇದೇ ಮೊದಲೇನಲ್ಲ. 1999 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಡಿಎಂಕೆ ಪಕ್ಷವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಎನ್ಡಿಎ ಸರ್ಕಾರದ ಭಾಗವಾಗಿತ್ತು. ತದನಂತರ 2003 ರಲ್ಲಿ ಡಿಎಂಕೆ ಈ ಮೈತ್ರಿಯಿಂದ ಹೊರಬಂದಿತ್ತು.
22 ಡಿಎಂಕೆ ಸಂಸದರು ಎನ್ಡಿಎ ತೆಕ್ಕೆಗೆ?
ಬಿಜೆಪಿಗೆ ಡಿಲಿಮಿಟೇಷನ್ ಹಾಗೂ ಮಹಿಳಾ ಮೀಸಲಾತಿ ವಿಚಾರವಾಗಿ ಸಂಸತ್ತಿನಲ್ಲಿ ವಿಶೇಷ ಬಹುಮತದ ಅಗತ್ಯವಿದೆ. ಹಾಗಾಗಿಯೇ, ರಾಜಕೀಯವಾಗಿ ಒಂಟಿಯಾಗಿರುವ ಡಿಎಂಕೆಯನ್ನ ಮನವೊಲಿಸಿ ಈ ಕುರಿತು ವಿಷಯಾಧಾರಿತ ಬೆಂಬಲ ಪಡೆದುಕೊಳ್ಳಲು ಬಿಜೆಪಿಯು ರಣತಂತ್ರ ರಚಿಸಿದೆ.
ಫಿನಿಕ್ಸ್ನಂತೆ ಎದ್ದ NDA ; ಅಂದು 292 ಇಂದು 350 ರ ಗಡಿಯತ್ತ!?
ಲೋಕಸಭಾ ಚುನಾವಣಾ ಫಲಿತಾಂಶದ ಸಮಯದಲ್ಲಿ ಅಬ್ ಕೀ ಬಾರ್ 400 ಪಾರ್ ಎನ್ನುತ್ತಿದ್ದ ಬಿಜೆಪಿಗೆ ಫಲಿತಾಂಶವು ಅಕ್ಷರಶಃ ಶಾಕ್ ನೀಡಿತ್ತು. ಬಿಜೆಪಿಗೆ ಏಕಾಂಗಿಯಾಗಿ ಬಹುಮತದ ಗಡಿಯನ್ನು ದಾಟಲು ಸಹ ಆಗಿರಲಿಲ್ಲ. ಟಿಡಿಪಿ – ಜೆಡಿಯು ನೆರವಿನಿಂದ ಬಹುಮತದ ಗಡಿ ದಾಟಿ ಉಸಿರಾಡುತ್ತಿತ್ತು. ಯಾವುದೇ ಪಕ್ಷವೂ ಹಿಂದೆ ಸರಿದರೂ ಸರ್ಕಾರ ಬೀಳುವ ಅಪಾಯದಲ್ಲಿತ್ತು.

3 ಮಸೂದೆಗೆ ಸೋಲಿನ ಬೆನ್ನಲ್ಲೇ ಬದಲಾದ NDA ಸ್ಟ್ರ್ಯಾಟಜಿ!
ಎಪ್ರಿಲ್ನಲ್ಲಿ 3 ವಿಧೇಯಕಗಳನ್ನು ಲೋಕಸಭೆಯಲ್ಲಿ ಮಂಡಿಸಿತು. 2029ರ ಚುನಾವಣೆಯ ಮುನ್ನ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಕಾಯ್ದೆಯನ್ನು ಜಾರಿಗೆ ತರಲು ಈ ಮೂರೂ ವಿಧೇಯಕಗಳು ಅಂಗೀಕಾರವಾಗುವುದು ಅತ್ಯಗತ್ಯ ಎಂದು ವಾದಿಸಲಾಯಿತು. ಆದರೆ ಮಸೂದೆಗೆ 3/2 ರಷ್ಟು ಬೆಂಬಲ ಸಿಗದೆ ಬಿದ್ದು ಹೋಯಿತು. ಇದು 2014 ರ ಬಳಿಕ ಮೋದಿ – ಅಮಿತ್ ಶಾ ಜೋಡಿಗೆ ಸಂಸತ್ತಿನಲ್ಲಿ ಸಿಕ್ಕ ಮೊದಲ ಸೆಟ್ ಬ್ಯಾಕ್ ಆಗಿತ್ತು. ಇಂಡಿ ಒಕ್ಕೂಟ ಈ ಸೋಲನ್ನು ತಮ್ಮ ಗೆಲುವೆಂದು ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಮೋ-ಶಾ ಜೋಡಿ ಚಾಣಕ್ಯ ನೀತಿ ಅನುಸರಿಸಿ ಅಂದಿನಿಂದಲೇ ಇಂಡಿ ಒಕ್ಕೂಟಕ್ಕೆ ಗುಂಡಿ ತೋಡಿತ್ತು.
ಪಶ್ಚಿಮ ಬಂಗಾಳದ ಗೆಲುವಿನ ಬೆನ್ನಲ್ಲೇ ಶುರುವಾದ ಬಿಜೆಪಿ ಶುಕ್ರದೆಸೆ
ಪಂಚ ರಾಜ್ಯದ ಚುನಾವಣೆಯ ಕಾವಿನ ಸಮಯದಲ್ಲಿ ಪೂರಕೆ ಹಿಡಿದಿದ್ದ ಆಮ್ ಆದ್ಮಿ ಪಕ್ಷದ (ಎಎಪಿ) 10 ಮೆಲ್ಮನೆ (ರಾಜ್ಯಸಭಾ) ಸಂಸದರ ಪೈಕಿ 7 ಸಂಸದರು ಬಂಡಾಯ ಸಾರಿದರು. ಬಳಿಕ ಬಿಜೆಪಿ ಸೇರ್ಪಡೆಗೊಂಡರು. ಚುನವಣಾ ಫಲಿತಾಂಶದ ಬಳಿಕ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ 28 ಲೋಕಸಭಾ ಸಂಸದರ ಪೈಕಿ 20 ಸಂಸದರು ಜೂನ್ 14ರಂದು ಅನಾಮಧೇಯ ಪಕ್ಷವಾದ ಎನ್ಸಿಪಿಐ ಜೊತೆ ವಿಲೀನಗೊಂಡರು. ಈಗ ಶಿವಸೇನೆಯ (ಉದ್ಧವ್ ಬಣ) 9 ಸಂಸದರ ಪೈಕಿ 6 ಲೋಕಸಭಾ ಸದಸ್ಯರು ಬಂಡಾಯವೆದ್ದಿದ್ದಾರೆ. ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸೈಕಲ್ ಕೂಡ ಪಂಕ್ಚರ್ ಆಗಿದೆ. ಈ ಎಲ್ಲಾ ಪಕ್ಷದ ಹಲವು ಸಂಸದರು ಎನ್ಡಿಎ ಪಾಳಯಕ್ಕೆ ಸೇರುವ ಸಾಧ್ಯತೆಗಳಿವೆ. ಜಾರ್ಖಂಡಿನ ಜೆಎಂಎಂ ಸಂಸದರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ವರದಿಗಳಿವೆ. ಮೇಲಿನ ಎಲ್ಲಾ ಸಾಧ್ಯತೆಗಳು ನಿಜವಾದರೆ NDA ಮೈತ್ರಿಕೂಟದ ಬಲ ಲೋಕಸಭೆಯಲ್ಲಿ 350+ ಆಗಲಿದೆ.
ರಾಜ್ಯಸಭೆಯಲ್ಲೂ ಬಿಜೆಪಿಯನ್ನು ಕಟ್ಟಿ ಹಾಕುವವರು ಇಲ್ಲ!
ರಾಜ್ಯಸಭೆಯ ಒಟ್ಟು 244 ಸ್ಥಾನಗಳಲ್ಲಿ ಎನ್ಡಿಎ ಆರಂಭದಲ್ಲಿ 138 ಸಂಸದರನ್ನು ಹೊಂದಿತ್ತು. ಏಪ್ರಿಲ್ 24ರಂದು ಆಮ್ ಆದ್ಮಿ (ಎಎಪಿ) ಪಕ್ಷದ 7 ರಾಜ್ಯಸಭಾ ಸಂಸದರು ಬಿಜೆಪಿಗೆ ಸೇರ್ಪಡೆಯಾದರು. ಇದರಿಂದ ಬಿಜೆಪಿಯ ರಾಜ್ಯಸಭಾ ಸದಸ್ಯರ ಸಂಖ್ಯೆ 106ರಿಂದ 113ಕ್ಕೆ ಮತ್ತು ಎನ್ಡಿಎ ಒಟ್ಟು ಬಲ 145ಕ್ಕೆ ಏರಿತು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹೆಚ್ಚುವರಿ ಸ್ಥಾನಗಳನ್ನು ಗೆದ್ದಿದ್ದು, ಜೊತೆಗೆ ಟಿಎಂಸಿಯ ರಾಜ್ಯ ಸಭೆಯ ಸಂಸದರ ಸರಣಿ ರಾಜೀನಾಮೆ ಮುಂದುವರಿದಿದ್ದು ಇವೆಲ್ಲಾವೂ NDA ಬುಟ್ಟಿಗೆ ಬೀಳಲಿದೆ. ಆಗ ರಾಜ್ಯಸಭೆಯಲ್ಲಿ ಎನ್ಡಿಎ ಸಂಖ್ಯೆ 150+ ಆಗಲಿದೆ.
ಈ ಎಲ್ಲಾ ಬದಲಾವಣೆಗಳಿಂದ ದೊಡ್ಡ ಲಾಭ ಪಡೆಯಲಿರುವ ಎನ್ಡಿಎ ಮುಂಗಾರು ಅಧಿವೇಶನ ಆರಂಭವಾಗುವ ಮುನ್ನವೇ ಮೂರನೇ ಎರಡರಷ್ಟು ಬಹುಮತದ ಗುರಿಯನ್ನು ತಲುಪುವ ಸಾಧ್ಯತೆ ದಟ್ಟವಾಗಿದೆ. ಇವಿಷ್ಟೇ ಅಲ್ಲದೇ ಮಹತ್ತರ ಮಸೂದೆ ಮಂಡನೆ ಸಮಯದಲ್ಲಿ ಇಂಡಿ ಒಕ್ಕೂಟದ ಹಲವು ಸಂಸದರು ಗೈರು ಆಗುವ ಸಾಧ್ಯತೆಗಳು ಹೆಚ್ಚಿದೆ. ಆ ಮೂಲಕ NDA ಅಂದು ಉಂಟಾದ ಸೋಲನ್ನೇ ಮಹತ್ತರ ಗೆಲುವಾಗಿ ಪರಿವರ್ತನೆ ಮಾಡಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

