ಪುತ್ತೂರು, ಜೂನ್ 25: ಗ್ರಾಮಜನ್ಯ ರೈತ ಉತ್ಪಾದಕ ಕಂಪನಿ ನಿಯಮಿತ, ಹಿಂದಾರು–ಮುಂಡೂರು ವತಿಯಿಂದ ನಿರ್ಮಿಸಲಾದ ಆಧುನಿಕ ಶೈತ್ಯಾಗಾರವನ್ನು ಇಂದು ನಡೆದ ಸಮಾರಂಭದಲ್ಲಿ ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು. ಬಳಿಕ ಶೈತ್ಯಾಗಾರದ ಪ್ರವೇಶ ದ್ವಾರವನ್ನು ತೆರೆಯುವ ಮೂಲಕ ಸಾರ್ವಜನಿಕ ಬಳಕೆಗೆ ಅಧಿಕೃತವಾಗಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಶೈತ್ಯಾಗಾರದ ಪ್ರಥಮ ಗ್ರಾಹಕರಾದ ಅಭಿಜ್ಞಾನ ಫುಡ್ಸ್ (ನಿತ್ಯ ಚಪಾತಿ) ಸಂಸ್ಥೆಯ ಶ್ರೀ ರಾಧಾಕೃಷ್ಣ ಹಾಗೂ ಪಿಂಗಾರ ರೈತ ಉತ್ಪಾದಕ ಕಂಪನಿಯ ಶ್ರೀ ರಾಮಕಿಶೋರ್ ಮಂಚಿ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಹಲಸು ಮೇಳದಲ್ಲಿ ಪುತ್ತೂರಿಗೆ ಶೈತ್ಯಾಗಾರದ ಅಗತ್ಯತೆಯನ್ನು ಪ್ರಸ್ತಾಪಿಸಿ, ಈ ಯೋಜನೆಗೆ ಪ್ರೇರಣೆ ನೀಡಿದ ಮುಳಿಯ ಸಮೂಹ ಸಂಸ್ಥೆಯ ಮುಖ್ಯಸ್ಥ ಶ್ರೀ ಕೇಶವ ಪ್ರಸಾದ್ ಮುಳಿಯ ಅವರನ್ನೂ ಗೌರವಿಸಲಾಯಿತು.
ಸಂಸ್ಥೆಯ ನಿರ್ದೇಶಕರಾದ ಶ್ರೀ ನಿರಂಜನ್ ಪೋಳ್ಯ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಶ್ರೀ ರಾಮಪ್ರತೀಕ್ ಕರಿಯಾಲ್ ಪ್ರಾಸ್ತಾವಿಕ ಭಾಷಣ ಮಾಡಿ, ಗ್ರಾಮಜನ್ಯ ಸಂಸ್ಥೆ ಬೆಳೆದು ಬಂದ ಹಾದಿ, ರೈತರ ಅಭಿವೃದ್ಧಿಗಾಗಿ ಕೈಗೊಂಡಿರುವ ವಿವಿಧ ಯೋಜನೆಗಳು, ಆಧುನಿಕ ಶೈತ್ಯಾಗಾರದ ಅಗತ್ಯತೆ ಹಾಗೂ ಇದರ ಮೂಲಕ ರೈತರು, ಆಹಾರ ಸಂಸ್ಕರಣಾ ಘಟಕಗಳು, ವ್ಯಾಪಾರಿಗಳು, ಜ್ಯೂಸ್ ಕೇಂದ್ರಗಳು, ಬೇಕರಿಗಳು, ಹೋಟೆಲ್ಗಳು ಮತ್ತು ಸಾರ್ವಜನಿಕರಿಗೆ ದೊರೆಯುವ ಪ್ರಯೋಜನಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು.

ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮೂಲಚಂದ್ರ ಕೆ. ಅಧ್ಯಕ್ಷೀಯ ಭಾಷಣ ಮಾಡಿದರು. ನಿರ್ದೇಶಕಿ ಶ್ರೀಮತಿ ಯಶಸ್ವಿನಿ ವಂದನಾರ್ಪಣೆ ಸಲ್ಲಿಸಿದರು. ಸಂಸ್ಥೆಯ ಅಕೌಂಟೆಂಟ್ ಶ್ರೀ ಕೃಷ್ಣ ಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸಿದರು.
ಉದ್ಘಾಟನಾ ಭಾಷಣದಲ್ಲಿ ಶ್ರೀ ಕಿಶೋರ್ ಕುಮಾರ್ ಮಾತನಾಡಿ, ಗ್ರಾಮಜನ್ಯ ರೈತ ಉತ್ಪಾದಕ ಕಂಪನಿಯು ಗ್ರಾಮೀಣ ಪ್ರದೇಶದಲ್ಲಿ ಅತ್ಯಾಧುನಿಕ ಶೈತ್ಯಾಗಾರ ನಿರ್ಮಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ರೈತರು, ಆಹಾರ ಸಂಸ್ಕರಣಾ ಘಟಕಗಳು, ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಈ ಸೌಲಭ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವ ಮೂಲಕ ಕೃಷಿ ಉತ್ಪನ್ನಗಳ ಗುಣಮಟ್ಟ ಕಾಪಾಡಿಕೊಳ್ಳಲು ಹಾಗೂ ಉತ್ತಮ ಮಾರುಕಟ್ಟೆ ಬೆಲೆ ಪಡೆಯಲು ಸಾಧ್ಯವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮೂಲಚಂದ್ರ ಕೆ., ನಿರ್ದೇಶಕರಾದ ಶ್ರೀ ನಿರಂಜನ್ ಪೋಳ್ಯ, ಶ್ರೀ ಶಂಕರನಾರಾಯಣ ಭಟ್ ಖಂಡಿಗೆ, ಶ್ರೀ ಹರ್ಷಕುಮಾರ್ ಎಂ.ಎಸ್., ಶ್ರೀ ಬಲರಾಮ ಕೆ. ಹಾಗೂ ಶ್ರೀ ಸುಬ್ರಾಯ ಬಿ.ಎಸ್. ಉಪಸ್ಥಿತರಿದ್ದರು. ಸಂಸ್ಥೆಯ ಮಾರ್ಗದರ್ಶಕ ಮಂಡಳಿಯ ಸದಸ್ಯರಾದ ಶ್ರೀ ಸತ್ಯನಾರಾಯಣ ಎಂ.ಜಿ. ಹಾಗೂ ನಿವೃತ್ತ ವಿಜ್ಞಾನಿ ಶ್ರೀ ಯದುಕುಮಾರ್ ಎನ್. ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಶುಭ ಹಾರೈಸಿದರು.
ಗ್ರಾಮಜನ್ಯ ರೈತ ಉತ್ಪಾದಕ ಕಂಪನಿಯ ಸದಸ್ಯರು, ಸಿಬ್ಬಂದಿಗಳು, ರೈತರು, ಹಿತೈಷಿಗಳು, ವಿವಿಧ ರೈತ ಉತ್ಪಾದಕ ಕಂಪನಿಗಳ ಪ್ರತಿನಿಧಿಗಳು, ಆಹಾರ ಸಂಸ್ಕರಣಾ ಉದ್ಯಮಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಶೈತ್ಯಾಗಾರದ ಆರಂಭದಿಂದ ಪುತ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶದ ರೈತರು ಮತ್ತು ಉದ್ಯಮಿಗಳಿಗೆ ಕೃಷಿ ಹಾಗೂ ಆಹಾರ ಉತ್ಪನ್ನಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡುವ ಅತ್ಯಾಧುನಿಕ ಸೌಲಭ್ಯ ಲಭ್ಯವಾಗಿದ್ದು, ಕೃಷಿ ಮೌಲ್ಯವರ್ಧನೆ ಮತ್ತು ಗ್ರಾಮೀಣ ಆರ್ಥಿಕಾಭಿವೃದ್ಧಿಗೆ ಗ್ರಾಮಜನ್ಯದ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.

